Friday, May 6, 2011

ನಾನು ಊರಿಗೆ ಹೋದಾಗ ತೆಗೆದ ಕೆಲವು ಫೋಟೊಗಳನ್ನು ಫೇಸ್ ಬುಕ್ ನಲ್ಲಿ ಹಾಕಿದ್ದೆ. ಅದನ್ನ ನೋಡಿ ಗೆಳೆಯ ಮಹಾಬಲಗಿರಿ ಭಟ್ಟರೊಂದು ಕವನ ಬರೆದು "ನೋಡು ನೀನು ಒಂದು ನವ್ಯ ಶೈಲಿಯಲ್ಲಿ ಕವನ ಬರಿಯಕ್ಕು ಶುಕ್ರವಾರದ ಒಳಗೆ ಬರಿಲೇಬೇಕು ಎಂತಾದ್ರು ಮಾಡು" ಹೇಳಿಬಿಟ್ರು.. ನಂಗೆ ಒಳ್ಳೆ ಪಜೀತಿ .. ನಾನು ಫೋಟೋ ನೋಡಿ ಕವನ ಬರೆಯುವುದಿಲ್ಲ .. ಕವನ ಬರೆದು ಆಮೇಲೆ ಫೋಟೋ ಗೂಗ್ಲ್ ಗೆ ಹುಡುಕುವುದು ನನ್ನ ಅಭ್ಯಾಸ.. ಆದರೆ ಅವರ ಪ್ರೀತಿಪೂರ್ವಕ ಸ್ಪೂರ್ತಿಗೆ ಗೆಳೆತನದ ಅಧಿಕಾರದ ಒತ್ತಾಯಕ್ಕೆ ಒಲ್ಲೆ ಹೇಳುವುದು ಸಾಧ್ಯವೇ ಇಲ್ಲ .. ಅದಕ್ಕಾಗಿ ನನ್ನೀ ಕವನ.. ಈ ಫೋಟೋದಲ್ಲಿರುವವರು ನಾಗಿ ಅಂತ. ಮೊದಲೆಲ್ಲಾ ನಮ್ಮನೆ ಕೆಲಸಕ್ಕೆ ಬರುತ್ತಿದ್ದವರು .. ಈಗ ಮುಪ್ಪಡರಿದೆ..

ಮಹಾಬಲಗಿರಿ ಭಟ್ಟರು ನನ್ನೊಬ್ಬನಿಂದಲೇ ಅಲ್ಲ .. ಇನ್ನೂ ಇಬ್ಬರಿಂದ ಬರೆಸಿ ಜುಗಲ್ ಬಂಧಿ ಮಾಡಿದ್ದಾರೆ.. ಕರಾವಳಿ ರೈಲಿನಲ್ಲಿ ಬ್ರಾಡ್ ಗೇಜ್ ಮೇಲೆ ಭರ್ಜರಿ ನಾಲ್ಕು ಕವನಗಳ ರೈಲನ್ನು ಓಡಿಸಿದ್ದಾರೆ. ಒಂದೊಳ್ಳೆಯ ಪ್ರಯತ್ನ.. ಕವನ ಬರೆದ ಗೆಳತಿ ವಾಣಿಶ್ರೀ ಭಟ್ ಮತ್ತು ಪರಾಂಜಪೆ ಸರ್ ಗೆ ಧನ್ಯವಾದಗಳು..

ಇಲ್ಲಿ ನನ್ನ ಕವನವಸ್ಟೇ ಇದೆ .. ಎಲ್ಲಾ ಕವನ ಕರಾವಳಿ ರೈಲು ಸೂರಿನಲ್ಲಿ

http://karavalirail.blogspot.com/



ಮುಪ್ಪು ಸಿಹಿಯಲ್ಲ ಉಪ್ಪು!
-----------

ರಟ್ಟೆ ಗಟ್ಟಿಯಿದ್ದಾಗ
ರೊಟ್ಟಿ ಬೇಕಷ್ಟು ತಟ್ಟಿದ್ದೆ
ಸುಟ್ಟಿದ್ದೆ..
ಅಲ್ಲಷ್ಟು,ಇಲ್ಲಷ್ಟು
ಕಷ್ಟವೆನಿಸಲಿಲ್ಲ ಎಳ್ಳಷ್ಟೂ..
ನೇಸರ ಮೂಡುವ ಮುನ್ನ
ಹುಟ್ಟಿ ..
ಅವ ಸತ್ತಮೇಲೂ ಬದುಕಿದ್ದೆ..

ಅದು ವಸಂತ
ನೋಡಿದ್ದೆಲ್ಲಾ ಚಿಗುರು
ಬೆಳೆದಂತೆಲ್ಲಾ ಹಸಿರು
ಉಮೇದು ,ಉತ್ಸಾಹ ಉನ್ಮಾದ
ಕಾದು ಕರಗಿ ಬೆಂಡಾದರೂ
ಜಗಜಟ್ಟಿ
ತಣಿದಂತೆಲ್ಲಾ ಕಬ್ಬಿಣ
ಬಲು ಗಟ್ಟಿ..

ಕಾಲ ಕರಗಿ ಶಿಶಿರಾಗಮನ ಮುಪ್ಪಡರಿ
ಕಸುವಿನೆಲೆ ಉದುರಿ..
ದೇಹ ಮುದುರಿ..
ಕನಸು ಕಮರಿ..
ಇದು ಬಾಳು ಹಣ್ಣಾದ ಪರಿ

ಹೊಸ ಸೂರ್ಯ ಹುಟ್ಟಿದಂತೆಲ್ಲಾ
ಸಾವು ಹತ್ತಿರ
ಬೆಳಗು,ಮುಳುಗು ವ್ಯತ್ಯಾಸವೇನಿಲ್ಲ
ದೃಷ್ಠಿ ಬಹಳ ದೂರ
ಬಗ್ಗಿ ಕುಗ್ಗಿ ಬಾಗಿಹೋಗಿದೆ ಶರೀರ

ಊರಲೂ ಹರಿಯದ
ದೇಹಕ್ಕೆ..
ಊರುಗೋಲೇ ಭಾರ !!




Friday, April 29, 2011

ಕನ್ನಡಿಯೆದುರಿಗೆ ನಿಂತು ..


ನಾ ನಕ್ಕರೆ ನಿನ್ನದೂ
ಅದೇ ಉತ್ತರ
ಅತ್ತರಷ್ಟೇ ನನ್ನೊಂದಿಗೆ
ನೀನು ತತ್ತರ

ಅಳು ನಗು ಚೆಲುವು ಚಿತ್ತಾರ
ಗಂಭೀರ ಗತ್ತು
ಅಲಂಕಾರ,ಅನುಕರಣೆ
ಒಳ ತಿವಿತ ನಿನಗೇನು ಗೊತ್ತು

ಬಲ್ಲೆಯೇನು?
ತಣ್ಣನೆ ನಗುವಿನ ಹಿಂದಿರುವ
ಕುದಿಯುವ ನೋವು
ಹೊಳಪಿನ ನೋಟದ ಹಿಂದಿರುವ
ಕಣ್ಣೀರಿನ ಹರಿವು

ನೀ ಬಿಂಬಿಸಿದ್ದು..
ಪ್ರತಿಬಿಂಬದಲಿ ಮೂಡಿದ್ದು
ಕೇವಲ ನನ್ನ ಬಾಹ್ಯ
ಒಳ ಬಗೆದು ಬಯಲಿಗಿಟ್ಟರೆ
ನೀ ಭರಿಸಲಾಗದ ಅಸಹ್ಯ

ಹೊರಬರಲಾರೆ ನಾನಾಗಿ ನಾ
ಕದಡಬೇಕು ಕಣ್ಣ..
ಇಲ್ಲಾ ಒಡೆಯಬೇಕು ನಿನ್ನ..
ಒಡೆದ ಸಾವಿರ ಚೂರಿನಲ್ಲೂ
ಕಾಣಿಸಿದ್ದು..
ಲಕ್ಷ,ಅಲಕ್ಷ ..ಮುಖವಾಡ

ಪ್ರೀತಿಯಿಂದ ಪ್ರವಿ


Wednesday, March 30, 2011

ಒಂದು ಖುಷಿ ವಿಚಾರ

ನನ್ನ ಚೊಚ್ಚಲ ಕವನ ಸಂಕಲನ "ತೆರೆ ಬಾರದ ತೀರದಲ್ಲಿ ಮೂಡಿದ ಹೆಜ್ಜೆ ಗುರುತು" ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿಸಲು ಆಯ್ಕೆಯಾಗಿದೆ ಎಂದು ಹೇಳಲು ಖುಷಿಯಾಗುತ್ತಿದೆ. ಪ್ರಕಟಣಾ ಕಾರ್ಯಕ್ರಮದ ದಿನಾಂಕ ಇನ್ನು ನಿಗದಿಯಾಗಿಲ್ಲ.... ನಿಮ್ಮ ಪ್ರೋತ್ಸಾಹ ಎಂದಿನಂತೆ ಎಂದೆಂದೂ ಮುಂದುವರಿಯಲಿ... ಪುಸ್ತಕ ಪ್ರಿಂಟ್ ಆದ ಮೇಲೆ ಹೇಳುತ್ತೇನೆ... ಕೊಳ್ಳಲು ಮರಿಯಬೇಡಿ :).... ಕನ್ನಡಪ್ರಭದಲ್ಲಿ ಬಂದಿದ್ದನ್ನು ಲಗತ್ತಿಸಿದ್ದೇನೆ.... ಇನ್ನೂ ಖುಷಿಯ ವಿಚಾರವೆಂದರೆ ಗೆಳೆಯ ನಾಗರಾಜ್ ವೈದ್ಯನ ಕವನ ಸಂಕಲನವೂ ಆಯ್ಕೆಯಾಗಿದೆ.....



ಪ್ರೋತ್ಸಾಹವಿರಲಿ..


ಪ್ರೀತಿಯಿಂದ ಪ್ರವಿ

Tuesday, March 8, 2011

ಬೆಲೆ ಹೆಚ್ಚಿಸಿಕೊಂಡ ಗಾಂಧಿ ಬಡವನಾದ




ಒಂದು ಎರಡು ಐದು ರೂಪಾಯಿ
ನೋಟಿನಲ್ಲಿದ್ದ ಗಾಂಧೀಜಿ
ಕಳೆದು ಹೋಗಿದ್ದಾನೆ..
ನೋಟಿನೊಂದಿಗೆ....

ನೂರು ಐನೂರು ಸಾವಿರ
ಗಾಂಧಿ ಬೆಲೆ ಏರುತ್ತಿದೆ ಮುಗಿಲೆತ್ತರ
ಬಡವನಿಂದ ಬಹಳ ದೂರ
ಸಿಗದೆ ದೈನೇಸಿಯಾಗಿ ಕೈ ಚಾಚಿದವನು
ಗೊಣಗುತ್ತಿದ್ದಾನೆ..
"
ನೋಟಿಗೆ ಬರುವುದಕ್ಕೂ ಮೊದಲು
ನಮ್ಮವನಾಗಿದ್ದನಿವ ... "

ಕಟ್ಟು ಕಟ್ಟು ನೋಟಿನಲ್ಲಿ
ಕಟ್ಟಿ ಹಾಕಲಾಗಿದೆ..
ಬದಲಾದ ಕೈಗಳೆಷ್ಟೋ..
ಬಳಸಿ ಬಳಲಿಸಿದವರೆಷ್ಟೋ...
ಅದೇ ಹಳೇ ಸೋಡಾ ಗ್ಲಾಸಿನಲ್ಲಿ
ಸುಮ್ಮನೆ ನೋಡುತ್ತಿದ್ದಾನೆ
ದೃಷ್ಟಿಯಿಲ್ಲದವರಂತೆ..
ಕಪ್ಪು ಕನ್ನಡಕ ಹಾಕುವ
ಕಾಮಗಾರಿ ಭರದಿಂದ ಸಾಗಿದೆ...

ಬೊಚ್ಚು ಬಾಯಿಯ ಬಿಚ್ಚು
ನಗುವಿನಲ್ಲಿ ಕಂಡಿದ್ದು..
ಅಟ್ಟಹಾಸ ತಡೆಯಲಾಗದ ಅಸಹಾಯಕತೆ
ಅಟ್ಟಿಸಿ ಹೊರಟವರ ನೋಡಿ ನಿಟ್ಟುಸಿರು
ಗೆದ್ದಲು ಹಿಡಿದ ಕೋಲು
ದಪ್ಪ ಹರಳಿನ ಹಿಂದೆ
ದೃಷ್ಠಿ ಬತ್ತಿದ ಕಣ್ಣು
ಬೆಲೆ ಏರಿದಂತೆಲ್ಲಾ ಗಾಂಧಿ
ಬಡವನಾಗುತ್ತಿದ್ದಾನೆ...
ಇವನೀಗ ದಿವ್ಯ ಮೌನಿ..
ಗಾಂಧಿಗೂ ಗೊತ್ತು ಇದು ಗಾಂಧಿಕಾಲವಲ್ಲ !!!!


Tuesday, February 15, 2011

ಬುದ್ಧನಾಗುವುದೆಂದರೆ..


ಬುದ್ಧನಾಗುವುದೆಂದರೆ..
ಬರಿದೇ..


ಮಧ್ಯರಾತ್ರಿಯಲಿ
ಸದ್ದಿಲ್ಲದೇ
ಎದ್ದು ಹೋಗುವುದಲ್ಲ

ಮುದ್ದು ಮಡದಿಗೆ
ಸುದ್ದಿ ಹೇಳದೇ
ನಿದ್ದೆಯಲಿ ತೊರೆದು ಹೋಗುವುದಲ್ಲ

ಬುದ್ಧನಾಗುವುದೆಂದರೆ
ಬರಿದೇ..


ರಾಜ್ಯ ಕೋಶ ಬೊಕ್ಕಸವ
ಒದ್ದು ಹೋಗುವುದಲ್ಲ
ಭೋದಿ ವೃಕ್ಷದ ಅಡಿಯಲ್ಲಿ
ಬೂದಿ ಬಳಿದು ಕೂರುವುದಲ್ಲ

ಬುದ್ಧನೆಂದರೆ....


ಕಷ್ಟದ ಕಣ್ಣೀರಿಗೆ ಕರವಸ್ತ್ರ
ಹಿಂಸೆಯ ಎದುರು ಶಾಂತಿಯಸ್ತ್ರ
ಜೀವನ ಮೌಲ್ಯದ ಜ್ಯೋತಿ
ದುರಾಸೆಯ ಅದುಮಿಡುವ ಶಕ್ತಿ
ಬಾಳು ಬೆಳಗುವ ಕಾಂತಿ
ನಿತ್ಯ ಜಂಜಡದ ಮುಕ್ತಿ..

ಬುದ್ಧನೆಂದರೆ....


ಅಷ್ಟ ತತ್ವದ ನಿಷ್ಠ
ಭ್ರಷ್ಟ ಬದಿಯಿಟ್ಟ ಸತ್ಯ
ಪ್ರಾಮಾಣಿಕತೆಯ ಪ್ರತೀಕ
ಕರ್ತವ್ಯದ ಪ್ರತಿ ರೂಪ..
ಕುಗ್ಗಿ ಕೂರದ ಬಗ್ಗಿ ಹೋಗದ ಅಚಲ
ನುಗ್ಗಿಹೋಗುವ ಛಲ..

ಬುದ್ಧನಾಗಬೇಕಾದರೆ..


ಶುದ್ಧನಾಗು,ಸಿದ್ದನಾಗು
ಸಿದ್ದಿಯತ್ತ ಸಾಗು
ಅಸಾಧ್ಯವ ಅಟ್ಟಿ
ಸಾಧನೆಯ ತಟ್ಟಿ
ಹಿಮ್ಮೆಟ್ಟದ ಯೋಧನಾಗು..

ಅರ್ಥವಾಗಬಹುದು .. ಬಾಳು
ವ್ಯರ್ಥವಾದರೆ ಸೋಲು..
ಬುದ್ದನಾಗುವ ಮೊದಲು..
ನಿನಗೆ ನೀ ಬದ್ಧನಾಗು..







Sunday, January 30, 2011

ಬಾಗಿಲಿರದ ಗೋಡೆ


ಸುತ್ತ ಬಾಗಿಲಿರದ ಮನೆ
ಕಟ್ಟಿಕೊಂಡಿದ್ದು ನಾವೇ...
ಸಿಎಫ್ಎಲ್ ನ ಸಾಮ್ರಾಜ್ಯದಲ್ಲಿ
ಸೂರ್ಯ ರೇಕುಗಳಿಗಿಲ್ಲ ಪ್ರವೇಶ
ತಣ್ಣನೆ ಏಸಿಯ ನಡುವೆ
ಬೀಸುಗಾಳಿಗಿಲ್ಲ ಅವಕಾಶ
ರೋಸು ಲ್ಯಾವೆಂಡರ್ ಮಲ್ಲಿಗೆ
ಕಂಪು ಹರಡುತಿದೆ ಮೆಲ್ಲಗೆ
ಚೆಲ್ಲಾಪಿಲ್ಲಿ ಚಿಲಿಪಿಲಿಯ ಜೊತೆಗೆ
ಬೆರಳ ತುದಿಯಲ್ಲಿ ಜಗತ್ತು
ಕುಣಿಯುತ್ತಲಿತ್ತು,ಗತ್ತು ,ಗಮ್ಮತ್ತು
ಸೂಟು ಬೂಟು ಸೂಟ್ ಕೇಸ್ ಮಧ್ಯ
ಬೇಕಿಲ್ಲ ವಿಶ್ವಾಸ
ಹಣ ಹೆಸರು ಉಚ್ವಾಸ ನಿಶ್ವಾಸ
ಸ್ವರ್ಗಕ್ಕೆ ಮೂರು ಮುಕ್ಕಾಲು ಗೇಣು
ಅಡ್ಡವಿದ್ದದ್ದು ಬರಿದೇ,..ಪರದೆ !!

ಆದರೂ
ಉಸಿರುಗಟ್ಟುತಿದೆಯೇಕೆ?
ಏಸಿಯಲೂ ಮೈ ಒಳಗೆ ಸೆಖೆ
ಕತ್ತು ಹಿಂಡುತಿದೆ . ಎಲ್ಲಾ ಕೃತಕ
ಸುತ್ತ ಕಾಣುವ ಛಾಯೆ ಸೂತಕ
ಪರದೆಯಾಚೆಗಿನ ನಾಕ
ಬರೀ.. ನಾಟಕ
ದಾಟಲಾಗದ ಪರಿಧಿಯಿದು
ಒಳಗೆ ಭಾರೀ ನರಕ

ಎಲ್ಲಿ ಹೋಯಿತು
ಮೊದಲ ಮಳೆಯ ಮಣ್ಣ ಕಂಪು
ಮನವ ತಣಿಸುವ ಹಕ್ಕಿಯಿಂಪು
ಮುತ್ತಿಕ್ಕುವ ಗಾಳಿ,ಮತ್ತೆ ಸೋಕುವ ಸೂರ್ಯ
ಸುತ್ತ ಸೆರುವ ಗೆಳೆಯರ ಗುಂಪು

ಕಳೆದುಕೊಂಡಲ್ಲಿ ಹುಡುಕು
ಕಡಿದುಕೊಂಡಿರುವ ಬದುಕು
ಸುಲಭವಲ್ಲ,ಹೊರ ದಾರಿಯಿಲ್ಲ
ಬಾಗಿಲಿರದ ಗೋಡೆ
ಹೋದಲ್ಲೆಲ್ಲಾ ತಡೆ...
ಒಡೆದು ಅರಳಬೇಕು .. ಇಲ್ಲಾ
ಒಳಗೆ ನರಳಬೇಕು..

----ಪ್ರೀತಿಯಿಂದ ಪ್ರವಿ

Tuesday, January 4, 2011

ಕಾಡುವ ಕಾಡು ಹೂ..
































ಬಾಡಿ ಹೋಗುವ ಮುನ್ನ
ಕಾಡು ಹೂವಿಗೊಂದು ಆಸೆ
ಅರಳಿಸಿದವನ್ಯಾರೋ..? ಅರಸಬೇಕು..

ಘೋರ ಕಾಡಿನ ನಡುವೆ
ಬಿರಿದು ನಿಂತಿರುವೆ
ಬಿಸಿಲು ಬೀಳಲಿ,ಬಿಡಲಿ
ಬೆಳಕಿನ ಕುರುಹು ಸಿಕ್ಕರೆ ಸಾಕು
ಅರಳಿ ಕಾದಿರುವೆ
ನೋಡುವ ಕುತೂಹಲ ಎಸಳಿನ
ಕಣ ಕಣದಲ್ಲಿ. ಕಣ್ಣಲ್ಲಿ..

ರವಿಯ ದರ್ಶನವಿಲ್ಲ
ಒಲವ ಸ್ಪರ್ಷವಿಲ್ಲ
ಮುಡಿಯ ಸೇರುವ ಮಾತು ಹಾಗಿರಲಿ
ನೋಡಿ ನಲಿಯುವವರಿಲ್ಲ

ಸೆಟೆದು ನಿಂತಿದೆ ಮರ
ನೆರಳು ನೀಡುತಿದೆಯಂತೆ.. ಧಿಮಾಕು
ಯಾರಿಗೆ ಬೇಕು?..
ಅಡ್ಡಿಯಾಗುತಿದೆಯೇಕೆ ಬರಲು ಬೆಳಕು

ಅರಳಿಸಿದವನ್ಯಾರಾದರೇನು
ಆಳುವವರಿಗೇನು ಕಮ್ಮಿಯಿಲ್ಲ
ಆಸೆಯ ಅದುಮಿಟ್ಟು
ಮಧುವನರಸಿ ಬಂದವರಿಗೆ
ಮೈ ನೀಡಬೇಕಂತೆ..
ಮೈ ತುಂಬಿದಾಗ ಹೂ ದುಂಬಿ
ಪ್ರಕೃತಿ ಧರ್ಮವಂತೆ..
ಆಸೆಯ ಮೇಲೆ ಅತ್ಯಾಚಾರ
ಬೆತ್ತಲಾದ ದೇಹದಲ್ಲಿ
ಬತ್ತಿಹೋಗಿದೆ ಮಕರಂದ
ದುಂಬಿಯೂ ಈಗ ದೂರ..

ಕಮರಿ ಹೋಗಿದೆ ಆಸೆ
ದೇಹದಂತೆ..
ಉದುರುತ್ತಿದ್ದೇನೆ!
ಕಾನನದಲ್ಲಿ ಕ್ರೌರ್ಯ..
ಹುಟ್ಟುವ ಕಾಯಿಗಾದರೂ
ಕಾಣಿಸುವನಾ...??
ಉತ್ತರಿಸುವವರ್ಯಾರು ?
ಮುಳುಗಿಹೋದ ಸೂರ್ಯ....