Tuesday, August 28, 2012

ಎರಡು ಕವನ , ವಸಂತ ಮತ್ತು ನೆಲವಿಲ್ಲ

ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ 2 ಕವನ , clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ 




1. ವಸಂತ
=========
ಬದುಕು ಬರೀ ಭ್ರಮೆ , ಸುಳ್ಳೇ,
ಅದು ನೀರ ಮೇಲಿನ ಗುಳ್ಳೆ
ಎಂದು ಸಂತನಾಗ ಹೊರಟವನನ್ನು
ತಡೆದು ನಿಲ್ಲಿಸಿದ್ದು ವಸಂತ !

ಚಿಗುರು ಚೈತ್ರ
ಮಧುರ ಮೈತ್ರ
ಪ್ರತೀ ಧನಿಯೂ ಕೋಗಿಲೆ
ಹೆಜ್ಜೆ ಹೆಜ್ಜೆಯೂ ನವಿಲೇ !

ಗುಳ್ಳೆಗಳ ಮೇಲೆಲ್ಲಾ ಚಿತ್ತಾರ
ಮರೆತೇ ಹೊಯಿತು ಶಿಶಿರ
ಬದುಕೀಗ ಭೂರಮೆ !

ಹಬ್ಬಿರುವ ಹೂವುಗಳ ತಬ್ಬಿ
ಹದ ಮಾಡುತ್ತಿವೆ ದುಂಬಿ
ಸೃಷ್ಠಿಯ ಹುಟ್ಟಿಗೆ ಓಂಕಾರ
ಮನದಲ್ಲಿ ಸಾವಿರ ಆಸೆಗಳ ಝೇಂಕಾರ!

ಸಂತನಾಗ ಹೊರಟವನ
ಮನೆಯಲ್ಲೀಗ ಸಂತೆ
ಶಿಶಿರದ ಬೆನ್ನಲ್ಲೇ ವಸಂತ
ಬೇಕಿಲ್ಲ ಬೋಳಾಗುವ ಚಿಂತೆ
ಯಾಕೆ ಗುಳೆ !
ನೀರು ನಿಜ, ಒಡೆದರೂ ಗುಳ್ಳೆ
ನೀರವದ ನಂತರ ದಿವ್ಯ ಕಲರವ !

2. ನೆಲ- ವಿಲ್ಲಾ !
==========
ನೆಲ ಬಗೆಯುತ್ತಿದ್ದಾರೆ
ನೇಗಿಲಿನಿಂದಲ್ಲ

ಮುಂಗಾರು ಅಭಿಷೇಕವಾದಾಗ
ಮಿದು ಮಾಡಬೇಕು
ಉತ್ತಬೇಕು ಬಿತ್ತಬೇಕು
ಮತ್ತೆ ಮನಸು ಮಗುವಾಗಬೇಕು
ಮೃದುವಾಗಬೇಕು
ಮೈ ಹೊಲಸಾದಂತೆಲ್ಲಾ
ನೆಲ ಹುಲುಸು
ರಟ್ಟೆ ಮುರಿದರೆ ರೊಟ್ಟಿ
ಬಿತ್ತಿದರೆ ಬುತ್ತಿ
ನೆತ್ತರು ನೀರಾಗಬೇಕು
ಬೆವರು ಬಸಿದು ಬರಿದಾಗಬೇಕು

ಯಾವನಿಗೆ ಬೇಕು ?

ರೊಟ್ಟಿ ಬುತ್ತಿ ಅದು ಜಮಾನ
ಬಿಟ್ಟು ಹಣ ತಿನ್ನುತ್ತಿದ್ದಾರೆ ಜನ
ರಟ್ಟೆ ಹೊಟ್ಟೆ ..
ಎಲ್ಲವೂ ಜೀರ್ಣ
ಹಿಡಿ ಮಣ್ಣು ಹಿಂಡಿದರೆ
ಹಿಡಿಯಲಾಗದ ಕೋಟಿ
ಮತ್ತೆ ಮತ್ತೆ ಲೂಟಿ

ಬರೀ ಲೆಖ್ಖಾಚಾರ
ಭೂವಿವಸ್ತ್ರ ಅತ್ಯಾಚಾರ
ಅಗೆದು ಬಗೆದು
ಬರಿದೋ ಬರಿದು
ರಕ್ತ ಬೋರ್ - ಗರೆಯುತಿದೆ
ಕರುಳು ಉರುಳು
ಕತ್ತು ಕುತ್ತು
ಕಗ್ಗೊಲೆ..
ನೆಲಕ್ಕಿಲ್ಲಿಲ್ಲ ನೆಲೆ
ಜೀವಂತ ನೆಲದ ಮೇಲೆ
ಸಿಮೆಂಟಿನ ಸಮಾಧಿ !

ಬಾಯಿ ಮೊಸರು ?
ಮಣ್ಣು ಮುಕ್ಕಲು
ಕೈ ಕೆಸರಾಗಬೇಕಿಲ್ಲ !