Wednesday, June 16, 2010

ಸತ್ತ ಪ್ರೀತಿಗೊಂದು ಗೋರಿ



ಸತ್ತ ಪ್ರೀತಿಯ ನೆನಪಲ್ಲೊಂದು

ಗೋರಿ ಕಟ್ಟಿರುವೆ

ನೆನಪುಗಳು ಕರಗದಂತೆ

ತಾಜ್ ಮಹಲ್ ನಿವಾಳಿಸಿ

ಒಗೆಯಬೇಕು ಹಾಗೆ...


ಜಲ್ಲಿ:ನೀ ಕೊಟ್ಟ ಉಡುಗೋರೆ

ಮರಳು:ಉಳಿಸಿಹೋದ ಪ್ರೀತಿಚೂರು

ಸಿಮೆಂಟ್ :ನೀ ಬರೆದ ಪತ್ರ

ನೀರು..? ಕಣ್ಣೀರು..

ನೆನಪುಗಳು ಒಳಗೆ ಭದ್ರ

[ಹೃದಯ ಛಿದ್ರ ಛಿದ್ರ ]


ಜನನ:

ಪ್ರೀತಿ ಹುಟ್ಟಿದ ದಿನ ನೆನಪಿಲ್ಲ

ನಿನ್ನ ನೋಡಿದಾಗಲೋ

ನೋಡಿ ನಡೆದಾಗಲೋ

ಕಣ್ಣು ಮಾತನಾಡಿದಾಗಲೋ

ತುಟಿ ಅರಳಿದಾಗಲೋ

ಸಧ್ಯಕ್ಕೆ:ಪ್ರೀತಿ ನಿವೇದಿಸಿಕೊಂಡ ದಿನ

ಆಮೇಲೆ ಪ್ರತೀ ದಿನ


ಮರಣ:

ಮರೆಯಲಾರದ ದಿನಾಂಖ

ಕಾರಣ,ಸತ್ತ ದಿನವೇ ಕಟ್ಟಿದ ಗೋರಿ

ಕೆತ್ತಿದ ಈ ಬರಹ

:ನೀನು ಏಕಾಏಕಿ ಕೈ ಕೊಟ್ಟ ದಿನ

ಕೈ ಬಿಟ್ಟ ಕ್ಷಣ

ತಿರುಗಿ ನೋಡದೇ ಹೋದ ದಿನ

ತುಟಿಯಲ್ಲಿ ಅಟ್ಟಹಾಸವೋ..

ಅಸಹಾಯಕತೆಯೋ..


ಶ್ರದ್ಧಾಂಜಲಿ ಕಳಿಸುವ ವಿಳಾಸ

ಆರದ ಗಾಯ

c/o ಭಗ್ನ ಹೃದಯ

ಮುರಿದ ನಿಲಯ

ಅಪಘಾತ ವಲಯ

PIN:ಅವಶ್ಯಕತೆ ಇದಿಯಾ?

ಅನಿಸುತ್ತಿಲ್ಲ.....


...ಅಮರ ಪ್ರೇಮಿ..


ಪ್ರೀತಿಯಿಂದ ಪ್ರವಿ



Tuesday, June 1, 2010

ನೀನೇ ನನ್ನ ನಲ್ಲೆ

















ಪ್ರೀತಿಯ ಚುಕ್ಕಿಯನಿಟ್ಟು

ಒಲವಿನ ಗೆರೆ ಎಳೆದು

ತರ ತರದ ಬಣ್ಣ ಸುರಿದು

ಮನದ ಅಂಗಳದಲ್ಲಿ

ಹಾಕಿದೆ ನೀ ರಂಗವಲ್ಲಿ


ಹೃದಯವ ಹಸನುಗೊಳಿಸಿ

ಒಲವಿನ ಜೊತೆಗೂಡಿ

ಪ್ರೀತಿಯ ಪಾತಿ ಮಾಡಿ

ಮನದ ಅಂಗಳದಲ್ಲಿ

ಹಬ್ಬಿಸಿದೆ ನೀ ಪ್ರೇಮ ಬಳ್ಳಿ


ರಂಗೋಲಿಯ ರಂಗಿನಲ್ಲಿ

ಹೂವುಗಳ ಹೊಳಪಿನಲ್ಲಿ

ಕಂಗೊಳಿಸುತಿದೆ ರಂಗಿನರಮನೆ

ಮೂಕವಿಸ್ಮಿತ,ನಿನ್ನ ಕಂಡೊಡನೆ

ಮರುಮಾತಾಡದೆ ಬಾ ಸುಮ್ಮನೆ

ನೋಡಿದು ನೀ ಕಟ್ಟಿದ ನಮ್ಮನೆ


ಮನೆಯ ಅಂಗಳದಲ್ಲಿ

ಬೀರಿದೆ ಘಮ,ಬಿರಿದ ಮಲ್ಲಿಗೆ ಚೆಲ್ಲಿ

ನಿನ್ನ ಪ್ರೀತಿಗೆ ಹೇಳಬಹುದೆ ಒಲ್ಲೆ

ನಿನ್ನ ಪ್ರೀತಿಯ ನಾ ಬಿಡಲೊಲ್ಲೆ

ನಾನು ನಲ್ಲ,ಬಾ ನೀನೇ ನನ್ನ ನಲ್ಲೆ


ಪ್ರೀತಿಯಿಂದ ಪ್ರವಿ



Friday, May 14, 2010

ತೊಲಗಿ ನೆನಪುಗಳೇ







ತೊಲಗಿ ನೆನಪುಗಳೇ

ಬದುಕಬೇಕಿದೆ ನಾನು


ಬೇಡ ಬೇಡವೆಂದರೂ

ಅಲೆ ಅಲೆಯಾಗಿ

ಎಳೆ ಎಳೆಯಾಗಿ ಕಣ್ಮುಂದೆ ಬರುವಿರೇಕೆ?

ಹೃದಯವ ಹಿಂಡಿ

ಮನವನು ಕಲಕಿ

ಬೆಂಬಿಡದ ಭೂತವಾಗಿ ಕಾಡುವಿರೇಕೆ?


ಮನಸ ಕೆರೆಯಲ್ಲಿ

ನೆನಪುಗಳೇ..ತಳ ಸೇರಿ

ಕಮಲವಿಲ್ಲದ ಮೇಲೆ

ಕೆಸರಿನ್ಯಾಕೆ?

ಬೇರುಗಳೂ ಸತ್ತಿವೆ

ಚಿಗುರುವಾಸೆ ಉಳಿದಿಲ್ಲ

ಸ್ವಚ್ಛವಾಗಬೇಕಿದೆ ನಾನು

ಅದಾಗದಿದ್ದರೂ..

ಸ್ವಚ್ಛವಾದಂತೆ ತೋರಿಸಬೇಕು ಜಗಕೆ..


ಕಲ್ಲು ಹೊಡೆದು ಕಲಕದಿರಿ

ಹಳಯದೆಲ್ಲವ ಕೆಣಕದಿರಿ

ಆಗ ಕೆಸರಿತ್ತು ನಿಜ..

ಆದರೆ ಜೊತೆ ಕಮಲವೂ ಇತ್ತು..


ತೊಲಗಿ ನೆನಪುಗಳೇ

ಪ್ರೀತಿ ಬದುಕಲಿಲ್ಲ

ಬದುಕ ಪ್ರೀತಿಸಬೇಕಿದೆ


ಪ್ರೀತಿಯಿಂದ ಪ್ರವಿ

Sunday, May 9, 2010

ಮಾತೃ ದೇವೋ ಭವ














ಅಮ್ಮ ಅನ್ನೋ ಪದ ಶಬ್ದಕ್ಕೆ ನಿಲುಕದ್ದು .. ಎರಡುವರೆ ಅಕ್ಷರದಲ್ಲಿ ಸಾವಿರ ಅರ್ಥವನ್ನು , ಸಾವಿರ ಭಾವವನ್ನು ಸೂಚಿಸುತ್ತೆ.

ಅಮ್ಮಂದಿರ ದಿನಾಚರಣೆಯ ಸಂದರ್ಭದಲ್ಲಿ ಈ ಕವನದ ಮೂಲಕ ಅಮ್ಮನಿಗೊಂದು ನಮನ




ಅಮ್ಮ....


ಅಮೃತದ ಕಡಲು,ಆ ನಿನ್ನ ಒಡಲು
ದುಃಖವನು ಮರೆಸಲು ಆ ನಿನ್ನ ಮಡಿಲು
ಬೇರೇನು ಬೇಕಿದೆ ನೀ ಜೊತೆಯಿರಲು
ಅಮ್ಮ,ನೀ ಆ ದೇವತೆಗಿಂತ ಮಿಗಿಲು

ಹೆತ್ತು ಹೊತ್ತು ಸಾಕಿ ಸಲಹಿ
ನಿತ್ಯ ನಿರಂತರ ಪ್ರೀತಿ ಎರೆದೆ
ಸಾವಿರಾರು ಕಷ್ಟದಲ್ಲಿ
ನೋವನುಂಡು ನಲಿವ ನೀಡಿದೆ

ಲಲ್ಲೆಗರೆದು ಮುದ್ದು ಮಾಡಿ
ಮೆಲ್ಲ ಮೆಲ್ಲನೆ ಮಾತ ಕಲಿಸಿದೆ
ಎದ್ದು ಬಿದ್ದು ಎಡವುತಿರಲು
ತಿದ್ದಿತೀಡಿ ನನ್ನನೆಡೆಸಿದೆ
ಬೆಳಕ ಬೀರಿ ದಾರಿ ತೋರಿ
ಬುದ್ದಿ ಹೇಳಿ ಬದುಕ ತಿಳಿಸಿದೆ

ಅಮ್ಮ ನೀನು ಶಬ್ದಾತೀತ
ನಿನ್ನ ಅರ್ಥ ಅನಂತ
ಅಮ್ಮ ನೀನು ಕಾಲಾತೀತ
ನಿನ್ನ ಮಮತೆ ಅನವರತ

ಅಮ್ಮ,ನೀನಿರದಿರೆ
ನನಗೆಲ್ಲಿಯ ಅಸ್ತಿತ್ವ
ನಮಿಪೆ ತಾಯೇ ನಿನಗೆ
ಮಾತೃ ದೇವೋ ಭವ

ಅಮ್ಮ,ನೀ ಪ್ರೀತಿ ತುಂಬಿದ ಕವಿತೆ
ನೀತಿ ತುಂಬಿದ ಕಥೆ
ಬದುಕು ಕಲಿಸಿದ ದೇವತೆ
ನಮಸ್ತೆ ನಮಸ್ತೆ ನಮಸ್ತೆ
ಒಲವಿನೊರತೆ ಓ ಜನ್ಮದಾತೆ

ಪ್ರೀತಿಯಿಂದ ಪ್ರವಿ