Friday, May 14, 2010

ತೊಲಗಿ ನೆನಪುಗಳೇ







ತೊಲಗಿ ನೆನಪುಗಳೇ

ಬದುಕಬೇಕಿದೆ ನಾನು


ಬೇಡ ಬೇಡವೆಂದರೂ

ಅಲೆ ಅಲೆಯಾಗಿ

ಎಳೆ ಎಳೆಯಾಗಿ ಕಣ್ಮುಂದೆ ಬರುವಿರೇಕೆ?

ಹೃದಯವ ಹಿಂಡಿ

ಮನವನು ಕಲಕಿ

ಬೆಂಬಿಡದ ಭೂತವಾಗಿ ಕಾಡುವಿರೇಕೆ?


ಮನಸ ಕೆರೆಯಲ್ಲಿ

ನೆನಪುಗಳೇ..ತಳ ಸೇರಿ

ಕಮಲವಿಲ್ಲದ ಮೇಲೆ

ಕೆಸರಿನ್ಯಾಕೆ?

ಬೇರುಗಳೂ ಸತ್ತಿವೆ

ಚಿಗುರುವಾಸೆ ಉಳಿದಿಲ್ಲ

ಸ್ವಚ್ಛವಾಗಬೇಕಿದೆ ನಾನು

ಅದಾಗದಿದ್ದರೂ..

ಸ್ವಚ್ಛವಾದಂತೆ ತೋರಿಸಬೇಕು ಜಗಕೆ..


ಕಲ್ಲು ಹೊಡೆದು ಕಲಕದಿರಿ

ಹಳಯದೆಲ್ಲವ ಕೆಣಕದಿರಿ

ಆಗ ಕೆಸರಿತ್ತು ನಿಜ..

ಆದರೆ ಜೊತೆ ಕಮಲವೂ ಇತ್ತು..


ತೊಲಗಿ ನೆನಪುಗಳೇ

ಪ್ರೀತಿ ಬದುಕಲಿಲ್ಲ

ಬದುಕ ಪ್ರೀತಿಸಬೇಕಿದೆ


ಪ್ರೀತಿಯಿಂದ ಪ್ರವಿ

Sunday, May 9, 2010

ಮಾತೃ ದೇವೋ ಭವ














ಅಮ್ಮ ಅನ್ನೋ ಪದ ಶಬ್ದಕ್ಕೆ ನಿಲುಕದ್ದು .. ಎರಡುವರೆ ಅಕ್ಷರದಲ್ಲಿ ಸಾವಿರ ಅರ್ಥವನ್ನು , ಸಾವಿರ ಭಾವವನ್ನು ಸೂಚಿಸುತ್ತೆ.

ಅಮ್ಮಂದಿರ ದಿನಾಚರಣೆಯ ಸಂದರ್ಭದಲ್ಲಿ ಈ ಕವನದ ಮೂಲಕ ಅಮ್ಮನಿಗೊಂದು ನಮನ




ಅಮ್ಮ....


ಅಮೃತದ ಕಡಲು,ಆ ನಿನ್ನ ಒಡಲು
ದುಃಖವನು ಮರೆಸಲು ಆ ನಿನ್ನ ಮಡಿಲು
ಬೇರೇನು ಬೇಕಿದೆ ನೀ ಜೊತೆಯಿರಲು
ಅಮ್ಮ,ನೀ ಆ ದೇವತೆಗಿಂತ ಮಿಗಿಲು

ಹೆತ್ತು ಹೊತ್ತು ಸಾಕಿ ಸಲಹಿ
ನಿತ್ಯ ನಿರಂತರ ಪ್ರೀತಿ ಎರೆದೆ
ಸಾವಿರಾರು ಕಷ್ಟದಲ್ಲಿ
ನೋವನುಂಡು ನಲಿವ ನೀಡಿದೆ

ಲಲ್ಲೆಗರೆದು ಮುದ್ದು ಮಾಡಿ
ಮೆಲ್ಲ ಮೆಲ್ಲನೆ ಮಾತ ಕಲಿಸಿದೆ
ಎದ್ದು ಬಿದ್ದು ಎಡವುತಿರಲು
ತಿದ್ದಿತೀಡಿ ನನ್ನನೆಡೆಸಿದೆ
ಬೆಳಕ ಬೀರಿ ದಾರಿ ತೋರಿ
ಬುದ್ದಿ ಹೇಳಿ ಬದುಕ ತಿಳಿಸಿದೆ

ಅಮ್ಮ ನೀನು ಶಬ್ದಾತೀತ
ನಿನ್ನ ಅರ್ಥ ಅನಂತ
ಅಮ್ಮ ನೀನು ಕಾಲಾತೀತ
ನಿನ್ನ ಮಮತೆ ಅನವರತ

ಅಮ್ಮ,ನೀನಿರದಿರೆ
ನನಗೆಲ್ಲಿಯ ಅಸ್ತಿತ್ವ
ನಮಿಪೆ ತಾಯೇ ನಿನಗೆ
ಮಾತೃ ದೇವೋ ಭವ

ಅಮ್ಮ,ನೀ ಪ್ರೀತಿ ತುಂಬಿದ ಕವಿತೆ
ನೀತಿ ತುಂಬಿದ ಕಥೆ
ಬದುಕು ಕಲಿಸಿದ ದೇವತೆ
ನಮಸ್ತೆ ನಮಸ್ತೆ ನಮಸ್ತೆ
ಒಲವಿನೊರತೆ ಓ ಜನ್ಮದಾತೆ

ಪ್ರೀತಿಯಿಂದ ಪ್ರವಿ



Tuesday, May 4, 2010

ಕುಡುಕನ ಕುಟುಂಬ




ಮನೆಯಲ್ಲಿ

ಹೆಂಡತಿ ದುಡಿದ ದುಗ್ಗಾಣಿ

ಗಂಡನ ಕೈಯಲ್ಲಿ

ದಿನಸಿಯ ನೆಪದಲ್ಲಿ

ಎರಡು ದಿನದಿಂದ ಅಡುಗೆ ಕಾಣದ

ಪಾತ್ರೆಗಳೂ ಪತರಗುಟ್ಟುತ್ತಿವೆ

ಹಸಿವಿನಿಂದ..

ಮಕ್ಕಳ ಲೆಖ್ಖದಲ್ಲಿ

ಇದು ಶ್ರೀಮಂತ ಕುಟುಂಬ

ಕತ್ತಲೆಯ ಬೆತ್ತಲೆಯಲ್ಲಿ

ಎಂಟೋ ,ಹತ್ತೋ..

ಸತ್ತವು ಬಿಟ್ಟು.

ಜೋತುಬಿದ್ದ ಮೊಲೆಯಲ್ಲಿ

ರಕ್ತ ಹೀರುತ್ತಿದೆ ಕಂದಮ್ಮ

ದೇಹ ಕಟ್ಟಿಗೆ ಗೂಡು

ಕಾಯುತ್ತಿದ್ದಾಳೆ..

ಅಷ್ಟೇ ಅವಳ ಕೆಲಸ

ಕುಡುಕನಿಗಾಗಿ

ಕಟ್ಟಿಕೊಂಡ ಕರ್ಮಕ್ಕಾಗಿ..


ದಾರಿಯಲ್ಲಿ.


ಕರಾಳ ರಾತ್ರಿಯ ನಡುವೆ

ಕುಡುಕ ಮತ್ತು ಕರಿಕುನ್ನಿ

ಕತ್ತಲೆಯೇ ಬೆದರುವಂತೆ

ಕುನ್ನಿ ಮೂಸಿದ್ದೇ ದಾರಿ ಕುಡುಕನಿಗೆ

ಉದ್ದವಿದ್ದಷ್ಟು ಅಗಲವಿಲ್ಲ

ದಿನಸಿ..?

ದೈನೇಸಿ..!!

ಎಲ್ಲಾ ಹೊಟ್ಟೆಲಿದ್ದ ಪರಮಾತ್ಮನಾಟ

ಬಾಯಲ್ಲಿ ಭಗವದ್ಗೀತೆ

ಕೇಳಲು ಕಿವಿ ಬೇಕೆ?

ಕುನ್ನಿಯೇ ಅರ್ಜುನ.

ಕೃತಜ್ನ(ಘ್ನ) ಕುನ್ನಿ

ಮನೆ ಸೇರಿಸಿದೆ..



ಹಸಿದ(??)ಹೆಂಡತಿಯ ಮೇಲೆ

ಬಿದ್ದ ಹದ್ದು..

ಮತ್ತೊಂದಕ್ಕೆ ಮುಹೂರ್ತ.

ಹತ್ತರ ಜೊತೆ ಹನ್ನೊಂದು

ಬೆಳಗ್ಗೆ ಹತ್ತು ಉಳಿದಿದ್ದರೆ..

ಹೆಂಡತಿ ಬದುಕಿದ್ದರೆ..




ಪ್ರೀತಿಯಿಂದ ಪ್ರವಿ

Tuesday, April 13, 2010

ಅತ್ತುಬಿಡು ಮನಸೇ!!!

ಒಂದು ಭಾವಗೀತೆ ಬರೆಯುವ ಚಿಕ್ಕ ಪ್ರಯತ್ನ







ಅತ್ತುಬಿಡು ಮನಸೇ...
ದುಃಖ ಅಳಿಸಿಬಿಡು ಮನಸೇ ||

ಮರುಭೂಮಿಯ ಮರಳಲ್ಲಿ ಹುಡುಕುವಿಯೇಕೆ ನೀರು?
ಇರಬಹುದು ಅಲ್ಲೆಲ್ಲೋ, ಸಿಗದೆ ಚೂರುಪಾರು
ಬಯಲುಸೀಮೆಯ ಬಯಲಲ್ಲಿ ಹುಡುಕುವೇಕೆ ನೆರಳು?
ಇರಬಹುದು ಅಲ್ಲೆಲ್ಲೋ,ಸಿಗದೆ ಜಾಲಿ ಮರದ ಸಾಲು|1|

ಅತ್ತುಬಿಡು ಮನಸೇ
ಸಿಗದ ದುಃಖವನು ಅಳಿಸೇ. .

ನೀ ಕಂಡ ಪ್ರೀತಿ ನಿದ್ದೆಯಿರದ ಕನಸು
ಬಿದ್ದೆಯಲ್ಲೋ ಬಾವಿಯಲ್ಲಿ,ನೀ ಬುದ್ದಿಯಿರದ ಮನಸು
ಮರೆಯದ ನೆನಪಲ್ಲೇ ದಿನಾ ಕೊರಗುವೆಯೇಕೆ?
ಮರೆತುಬಿಡು ಮನಸೇ,ಅವಳು ಕೈಗೆ ಸಿಗದ ಮರೀಚಿಕೆ |2|

ಅತ್ತುಬಿಡು ಮನಸೇ,
ತೊರೆದ ಪ್ರೀತಿಯನು ಮರೆಸೇ

ಅತ್ತುಬಿಡು ಮನಸೇ...
ದುಃಖ ಅಳಿಸಿಬಿಡು ಮನಸೇ




Monday, April 5, 2010

ಅಪರಿಚಿತೆಗೊಂದು ಪ್ರೇಮ ಪತ್ರ

















ಹಾಯ್ ಅಪರಿಚಿತೆ,


ಇನ್ನೇನು ಕರಿಯಲಿಕ್ಕೆ ಸಾಧ್ಯ,ನಾನು ನಿನ್ನ ಒಂದು ದಿನ ನೋಡಿದ್ದಸ್ಟೇ ,ಅದೂ ಕ್ಷಣವಸ್ಟೇ.ನಿನಗೆ ಗೊತ್ತಿಲ್ಲ ಬಿಡು, ನಾನಿನ್ನ ನೊಡಿದ್ದು, ನಿನ್ನನ್ನು ನನ್ನಲ್ಲಿ ತುಂಬಿಕೊಂಡಿದ್ದು.


ಎಂದೋ ಅಪರೂಪಕ್ಕೆ ಸ್ವಲ್ಪ ತಡವಾಗಿಯೇ ಜಾಗಿಂಗ್ ಹೋಗುತ್ತಿದ್ದ ನಾನು, ಅಂದು ಮುಂಜಾನೆಯೇ ಚುಮು ಚುಮು ಚಳಿಯಲ್ಲಿ ಸಣ್ಣದೊಂದು ಮಫ್ಲರ್ ಸುತ್ತಿ ಹೊರಟಿದ್ದೆ.ಈ ಬೆಳಗು ಅನ್ನೋದು ತುಂಬಾ ಆಶ್ಚರ್ಯ ಮತ್ತು ಸುಂದರ , ಯಾಕೆ ದಿನ ಪೂರ್ತಿ ಹೀಗೇ ಇರಬಾರದು ಅಂಥ ಯೊಚಿಸ್ತಾ ಓಡುತ್ತಿದ್ದೆ, ಇಬ್ಬನಿಯ ಆಸ್ವಾದಿಸುತ್ತಾ, ಹಕ್ಕಿಗಳ ಕಲರವ ಕೇಳುತ್ತಾ. ಇಷ್ಟು ದಿನವೂ ಏನೂ ಕಾಣಿಸದಿದ್ದ ಆ ಮನೆ ಮುಂದೆ ಅವೋತ್ತು ಮೊದಲು ನೀ ಕಂಡಿದ್ದು, ಮಲ್ಲಿಗೆಯ ಘಮ ಮೂಗಿಗೆ ಅಡರಿದಾಗ ಜೊತೆಗೆ ಕೋಗಿಲೆ ಕಂಠದಿಂದ ಬಂದ ಆ ಹಾಡು ಕೇಳಿದಾಗ...


ಮೂಡಲ ಮನೆಯ

ಮುತ್ತಿನ ನೀರಿನ

ಎರಕವ ಹೊಯ್ದ,ನುಣ್ಣನೇ ಎರಕವ ಹೊಯ್ದ

ಬಾಗಿಲು ತೆರೆದು

ಬೆಳಕು ಹರಿದು

ಜಗವೆಲ್ಲಾ ತೋಯ್ದ,ಹೊಯ್ತೋ ಜಗವೆಲ್ಲಾ ತೋಯ್ದು


ಸೂರ್ಯೋದಯಕ್ಕೆ ಅರಳಲು ಕಾದಿರುವ ಮಲ್ಲಿಗೆಯನ್ನು ಬಿಡಿಸುತ್ತಾ, ಹಾಡನ್ನು ಹೇಳುತ್ತಾ, ಮಲ್ಲಿಗೆಯಂತೆಯೇ ಇರುವ ನಿನ್ನನ್ನು ಎವೆಯಿಕ್ಕದೇ ನೋಡಿದ್ದೆ ಮತ್ತು ನನ್ನೇ ನಾನು ಮರೆತಿದ್ದೆ. ನೀನು ಮಾತ್ರ ನನ್ನನ್ನು ಕಿರುಗಣ್ಣಿನಲ್ಲಿಯೂ ನೋಡಲಿಲ್ಲ. ಹಾಡು ಮುಗಿಯಿತೋ , ಮಲ್ಲಿಗೆ ಮುಗಿಯಿತೋ ನೀನು ಒಳಗೆ ಹೋಗಿದ್ದೆ, ನಿನ್ನ ಬಿಂಬವನ್ನು ನನ್ನ ಕಣ್ಣಲ್ಲಿ ಬಿಟ್ಟು, ಹೃದಯಕ್ಕೆ ಲಗ್ಗೆಯಿಟ್ಟು, ನಾಳೆ ಮತ್ತೆ ಸಿಗುವೆಯೆಂಬ ನಿರೀಕ್ಷೆಯ ಹುಟ್ಟಿಸಿ.






ಕೇಳು ಗೆಳತಿ..

ಅಂದಿನಿಂದ ಇಂದಿನವರೆಗೆ ನಾನು ಒಂದು ದಿನವೂ ಜಾಗಿಂಗ್ ತಪ್ಪಿಸಲಿಲ್ಲ. ಆ ಮನೆಯ ಮುಂದೆ ಹತ್ತು ನಿಮಿಷ ಕಾಯದೇ ಹೋಗುವುದಿಲ್ಲ. ಆದರೆ ಪ್ರತಿದಿನವೂ ನಿರಾಸೆ, ಕಾಣುವುದು ಕಂಪೋಂಡ್ ಮತ್ತು ಹೂವೇ ಇಲ್ಲದ ಮಲ್ಲಿಗೆ ಬಳ್ಳಿ ಮಾತ್ರ.

ಆದರೆ ನನ್ನ ಹೃದಯ ಹೇಳುತಿದೆ ನೀನು ಸಿಕ್ಕೇ ಸಿಗುತ್ತೀಯ ಎಂದು. ನಮ್ಮ ಮನೆಯ ಎಲ್ಲಾ ಪಾಟಿನಲ್ಲಿ ಈಗ ಮಲ್ಲಿಗೆ ಬಳ್ಳಿ ಮಾತ್ರ, ದಿನಾ ಅದಕ್ಕೆ ನೀರು ಗೊಬ್ಬರ ಹಾಕಲು ಮರೆಯುವುದಿಲ್ಲ. ಹೂವು ಬಿಡುವ ಸಮಯ ಸನ್ನಿಹಿತವಾಗಿದೆ ಗೆಳತಿ, ನಿರಾಸೆ ಮಾಡದೇ ಬರುತ್ತೀಯಲ್ಲಾ?

ನಿನಗೆ ಬೇಕಾದಷ್ಟು ಹೂವು ಕೊಯ್ದುಕೋ, ಎಲ್ಲಾ ಹೂವು ನಿಂದೇ.. ಆದರೆ ಆ ಘಮ, ಆ ಹಾಡು..


ಗಿಡಗಂಟಿಯ ಕೊರಳೊಳಗಿಂದ

ಹಕ್ಕಿಗಳಾ ಹಾಡು, ಹೊರಟಿತು ಹಕ್ಕಿಗಳಾ ಹಾಡು..

ಮತ್ತು ನೀನು, ಇವೆಲ್ಲಾ ನಂದೇ..

ಒಪ್ಪುತ್ತೀಯಲ್ಲಾ?


ಪ್ರೀತಿಯಿಂದ ಪ್ರವಿ