Tuesday, March 8, 2011

ಬೆಲೆ ಹೆಚ್ಚಿಸಿಕೊಂಡ ಗಾಂಧಿ ಬಡವನಾದ




ಒಂದು ಎರಡು ಐದು ರೂಪಾಯಿ
ನೋಟಿನಲ್ಲಿದ್ದ ಗಾಂಧೀಜಿ
ಕಳೆದು ಹೋಗಿದ್ದಾನೆ..
ನೋಟಿನೊಂದಿಗೆ....

ನೂರು ಐನೂರು ಸಾವಿರ
ಗಾಂಧಿ ಬೆಲೆ ಏರುತ್ತಿದೆ ಮುಗಿಲೆತ್ತರ
ಬಡವನಿಂದ ಬಹಳ ದೂರ
ಸಿಗದೆ ದೈನೇಸಿಯಾಗಿ ಕೈ ಚಾಚಿದವನು
ಗೊಣಗುತ್ತಿದ್ದಾನೆ..
"
ನೋಟಿಗೆ ಬರುವುದಕ್ಕೂ ಮೊದಲು
ನಮ್ಮವನಾಗಿದ್ದನಿವ ... "

ಕಟ್ಟು ಕಟ್ಟು ನೋಟಿನಲ್ಲಿ
ಕಟ್ಟಿ ಹಾಕಲಾಗಿದೆ..
ಬದಲಾದ ಕೈಗಳೆಷ್ಟೋ..
ಬಳಸಿ ಬಳಲಿಸಿದವರೆಷ್ಟೋ...
ಅದೇ ಹಳೇ ಸೋಡಾ ಗ್ಲಾಸಿನಲ್ಲಿ
ಸುಮ್ಮನೆ ನೋಡುತ್ತಿದ್ದಾನೆ
ದೃಷ್ಟಿಯಿಲ್ಲದವರಂತೆ..
ಕಪ್ಪು ಕನ್ನಡಕ ಹಾಕುವ
ಕಾಮಗಾರಿ ಭರದಿಂದ ಸಾಗಿದೆ...

ಬೊಚ್ಚು ಬಾಯಿಯ ಬಿಚ್ಚು
ನಗುವಿನಲ್ಲಿ ಕಂಡಿದ್ದು..
ಅಟ್ಟಹಾಸ ತಡೆಯಲಾಗದ ಅಸಹಾಯಕತೆ
ಅಟ್ಟಿಸಿ ಹೊರಟವರ ನೋಡಿ ನಿಟ್ಟುಸಿರು
ಗೆದ್ದಲು ಹಿಡಿದ ಕೋಲು
ದಪ್ಪ ಹರಳಿನ ಹಿಂದೆ
ದೃಷ್ಠಿ ಬತ್ತಿದ ಕಣ್ಣು
ಬೆಲೆ ಏರಿದಂತೆಲ್ಲಾ ಗಾಂಧಿ
ಬಡವನಾಗುತ್ತಿದ್ದಾನೆ...
ಇವನೀಗ ದಿವ್ಯ ಮೌನಿ..
ಗಾಂಧಿಗೂ ಗೊತ್ತು ಇದು ಗಾಂಧಿಕಾಲವಲ್ಲ !!!!


Tuesday, February 15, 2011

ಬುದ್ಧನಾಗುವುದೆಂದರೆ..


ಬುದ್ಧನಾಗುವುದೆಂದರೆ..
ಬರಿದೇ..


ಮಧ್ಯರಾತ್ರಿಯಲಿ
ಸದ್ದಿಲ್ಲದೇ
ಎದ್ದು ಹೋಗುವುದಲ್ಲ

ಮುದ್ದು ಮಡದಿಗೆ
ಸುದ್ದಿ ಹೇಳದೇ
ನಿದ್ದೆಯಲಿ ತೊರೆದು ಹೋಗುವುದಲ್ಲ

ಬುದ್ಧನಾಗುವುದೆಂದರೆ
ಬರಿದೇ..


ರಾಜ್ಯ ಕೋಶ ಬೊಕ್ಕಸವ
ಒದ್ದು ಹೋಗುವುದಲ್ಲ
ಭೋದಿ ವೃಕ್ಷದ ಅಡಿಯಲ್ಲಿ
ಬೂದಿ ಬಳಿದು ಕೂರುವುದಲ್ಲ

ಬುದ್ಧನೆಂದರೆ....


ಕಷ್ಟದ ಕಣ್ಣೀರಿಗೆ ಕರವಸ್ತ್ರ
ಹಿಂಸೆಯ ಎದುರು ಶಾಂತಿಯಸ್ತ್ರ
ಜೀವನ ಮೌಲ್ಯದ ಜ್ಯೋತಿ
ದುರಾಸೆಯ ಅದುಮಿಡುವ ಶಕ್ತಿ
ಬಾಳು ಬೆಳಗುವ ಕಾಂತಿ
ನಿತ್ಯ ಜಂಜಡದ ಮುಕ್ತಿ..

ಬುದ್ಧನೆಂದರೆ....


ಅಷ್ಟ ತತ್ವದ ನಿಷ್ಠ
ಭ್ರಷ್ಟ ಬದಿಯಿಟ್ಟ ಸತ್ಯ
ಪ್ರಾಮಾಣಿಕತೆಯ ಪ್ರತೀಕ
ಕರ್ತವ್ಯದ ಪ್ರತಿ ರೂಪ..
ಕುಗ್ಗಿ ಕೂರದ ಬಗ್ಗಿ ಹೋಗದ ಅಚಲ
ನುಗ್ಗಿಹೋಗುವ ಛಲ..

ಬುದ್ಧನಾಗಬೇಕಾದರೆ..


ಶುದ್ಧನಾಗು,ಸಿದ್ದನಾಗು
ಸಿದ್ದಿಯತ್ತ ಸಾಗು
ಅಸಾಧ್ಯವ ಅಟ್ಟಿ
ಸಾಧನೆಯ ತಟ್ಟಿ
ಹಿಮ್ಮೆಟ್ಟದ ಯೋಧನಾಗು..

ಅರ್ಥವಾಗಬಹುದು .. ಬಾಳು
ವ್ಯರ್ಥವಾದರೆ ಸೋಲು..
ಬುದ್ದನಾಗುವ ಮೊದಲು..
ನಿನಗೆ ನೀ ಬದ್ಧನಾಗು..







Sunday, January 30, 2011

ಬಾಗಿಲಿರದ ಗೋಡೆ


ಸುತ್ತ ಬಾಗಿಲಿರದ ಮನೆ
ಕಟ್ಟಿಕೊಂಡಿದ್ದು ನಾವೇ...
ಸಿಎಫ್ಎಲ್ ನ ಸಾಮ್ರಾಜ್ಯದಲ್ಲಿ
ಸೂರ್ಯ ರೇಕುಗಳಿಗಿಲ್ಲ ಪ್ರವೇಶ
ತಣ್ಣನೆ ಏಸಿಯ ನಡುವೆ
ಬೀಸುಗಾಳಿಗಿಲ್ಲ ಅವಕಾಶ
ರೋಸು ಲ್ಯಾವೆಂಡರ್ ಮಲ್ಲಿಗೆ
ಕಂಪು ಹರಡುತಿದೆ ಮೆಲ್ಲಗೆ
ಚೆಲ್ಲಾಪಿಲ್ಲಿ ಚಿಲಿಪಿಲಿಯ ಜೊತೆಗೆ
ಬೆರಳ ತುದಿಯಲ್ಲಿ ಜಗತ್ತು
ಕುಣಿಯುತ್ತಲಿತ್ತು,ಗತ್ತು ,ಗಮ್ಮತ್ತು
ಸೂಟು ಬೂಟು ಸೂಟ್ ಕೇಸ್ ಮಧ್ಯ
ಬೇಕಿಲ್ಲ ವಿಶ್ವಾಸ
ಹಣ ಹೆಸರು ಉಚ್ವಾಸ ನಿಶ್ವಾಸ
ಸ್ವರ್ಗಕ್ಕೆ ಮೂರು ಮುಕ್ಕಾಲು ಗೇಣು
ಅಡ್ಡವಿದ್ದದ್ದು ಬರಿದೇ,..ಪರದೆ !!

ಆದರೂ
ಉಸಿರುಗಟ್ಟುತಿದೆಯೇಕೆ?
ಏಸಿಯಲೂ ಮೈ ಒಳಗೆ ಸೆಖೆ
ಕತ್ತು ಹಿಂಡುತಿದೆ . ಎಲ್ಲಾ ಕೃತಕ
ಸುತ್ತ ಕಾಣುವ ಛಾಯೆ ಸೂತಕ
ಪರದೆಯಾಚೆಗಿನ ನಾಕ
ಬರೀ.. ನಾಟಕ
ದಾಟಲಾಗದ ಪರಿಧಿಯಿದು
ಒಳಗೆ ಭಾರೀ ನರಕ

ಎಲ್ಲಿ ಹೋಯಿತು
ಮೊದಲ ಮಳೆಯ ಮಣ್ಣ ಕಂಪು
ಮನವ ತಣಿಸುವ ಹಕ್ಕಿಯಿಂಪು
ಮುತ್ತಿಕ್ಕುವ ಗಾಳಿ,ಮತ್ತೆ ಸೋಕುವ ಸೂರ್ಯ
ಸುತ್ತ ಸೆರುವ ಗೆಳೆಯರ ಗುಂಪು

ಕಳೆದುಕೊಂಡಲ್ಲಿ ಹುಡುಕು
ಕಡಿದುಕೊಂಡಿರುವ ಬದುಕು
ಸುಲಭವಲ್ಲ,ಹೊರ ದಾರಿಯಿಲ್ಲ
ಬಾಗಿಲಿರದ ಗೋಡೆ
ಹೋದಲ್ಲೆಲ್ಲಾ ತಡೆ...
ಒಡೆದು ಅರಳಬೇಕು .. ಇಲ್ಲಾ
ಒಳಗೆ ನರಳಬೇಕು..

----ಪ್ರೀತಿಯಿಂದ ಪ್ರವಿ

Tuesday, January 4, 2011

ಕಾಡುವ ಕಾಡು ಹೂ..
































ಬಾಡಿ ಹೋಗುವ ಮುನ್ನ
ಕಾಡು ಹೂವಿಗೊಂದು ಆಸೆ
ಅರಳಿಸಿದವನ್ಯಾರೋ..? ಅರಸಬೇಕು..

ಘೋರ ಕಾಡಿನ ನಡುವೆ
ಬಿರಿದು ನಿಂತಿರುವೆ
ಬಿಸಿಲು ಬೀಳಲಿ,ಬಿಡಲಿ
ಬೆಳಕಿನ ಕುರುಹು ಸಿಕ್ಕರೆ ಸಾಕು
ಅರಳಿ ಕಾದಿರುವೆ
ನೋಡುವ ಕುತೂಹಲ ಎಸಳಿನ
ಕಣ ಕಣದಲ್ಲಿ. ಕಣ್ಣಲ್ಲಿ..

ರವಿಯ ದರ್ಶನವಿಲ್ಲ
ಒಲವ ಸ್ಪರ್ಷವಿಲ್ಲ
ಮುಡಿಯ ಸೇರುವ ಮಾತು ಹಾಗಿರಲಿ
ನೋಡಿ ನಲಿಯುವವರಿಲ್ಲ

ಸೆಟೆದು ನಿಂತಿದೆ ಮರ
ನೆರಳು ನೀಡುತಿದೆಯಂತೆ.. ಧಿಮಾಕು
ಯಾರಿಗೆ ಬೇಕು?..
ಅಡ್ಡಿಯಾಗುತಿದೆಯೇಕೆ ಬರಲು ಬೆಳಕು

ಅರಳಿಸಿದವನ್ಯಾರಾದರೇನು
ಆಳುವವರಿಗೇನು ಕಮ್ಮಿಯಿಲ್ಲ
ಆಸೆಯ ಅದುಮಿಟ್ಟು
ಮಧುವನರಸಿ ಬಂದವರಿಗೆ
ಮೈ ನೀಡಬೇಕಂತೆ..
ಮೈ ತುಂಬಿದಾಗ ಹೂ ದುಂಬಿ
ಪ್ರಕೃತಿ ಧರ್ಮವಂತೆ..
ಆಸೆಯ ಮೇಲೆ ಅತ್ಯಾಚಾರ
ಬೆತ್ತಲಾದ ದೇಹದಲ್ಲಿ
ಬತ್ತಿಹೋಗಿದೆ ಮಕರಂದ
ದುಂಬಿಯೂ ಈಗ ದೂರ..

ಕಮರಿ ಹೋಗಿದೆ ಆಸೆ
ದೇಹದಂತೆ..
ಉದುರುತ್ತಿದ್ದೇನೆ!
ಕಾನನದಲ್ಲಿ ಕ್ರೌರ್ಯ..
ಹುಟ್ಟುವ ಕಾಯಿಗಾದರೂ
ಕಾಣಿಸುವನಾ...??
ಉತ್ತರಿಸುವವರ್ಯಾರು ?
ಮುಳುಗಿಹೋದ ಸೂರ್ಯ....




Tuesday, November 16, 2010

ಮುರಿದು ಮೌನ ಹಾಡು ಗಾನ






























ಮನದ
ಮಾಮರದಲ್ಲಿ
ಅಡಗಿರುವ ಕೋಗಿಲೆಯೇ
ಮೌನವೇಕೇ? ನಿನಗೆ ಮೌನವೇಕೇ?

ರೆಂಬೆ ಕೊಂಬೆಯಲೂ ಚೆಲುವು ಚಿಗುರಿತ್ತು ಅಂದು
ಮರದ ತುಂಬೆಲ್ಲಾ ಹಸಿರಿನಾ ಸಿಂಧು
ಎಲೆಗಳ ಮರೆಯಿಂದ ಕುಹೂ ಕುಹೂ ಗಾನ
ಹಾಡಿದ್ದ ಕೋಗಿಲೆಯೇ ಇಂದೇಕೆ ಮೌನ?

ಮನದ
ಮಾಮರದಲ್ಲಿ...

ಪ್ರೀತಿ ಹರಿದಿತ್ತು ಧಮನಿ ಧಮನಿಯಲೂ
ಭೀತಿಯಿರದೇ.. ಅದು ಸಂತಸದಾ ಬಾಳು
ಕಣ ಕಣದಲ್ಲೂ ವಸಂತನಾ ಆಗಮನ
ಅಂದು ಹಾಡಿದ್ದ ನೀನು ಇಂದೇಕೆ ಮೌನ ?

ಮನದ
ಮಾಮರದಲ್ಲಿ...

ಬಂದೆಯಾಕೇ ಬಾಳಿನಲ್ಲಿ ಶಿಶಿರ
ನಿಲ್ಲಿಸಲು ನನ್ನ ಪ್ರೀತಿ ಉಸಿರ..
ಬೆತ್ತಲಾಗಿದೆ ಮರವೀಗ ಎಲೆ ಉದುರಿ
ಬತ್ತಿ ಹೋಗಿದೆ ಮನ ಪ್ರೀತಿ ಚದುರಿ..

ಮನದ ಮಾಮರದಲ್ಲಿ...

ಹಾಡಲಾರೆಯಾ ಕೋಗಿಲೆಯೇ ಒಂದು ಸಲ
ಹುಡುಕಿ ಬರುವಂತೆ ವಸಂತ ನಿನ್ನ ಮೂಲ
ಹಾಡು ನೀ ಮತ್ತೆ ಚಿಗುರುವಂತೆ ಮರದ ಎಲೆ
ಹಾಡು ನೀ ಮತ್ತೆ ಹುಟ್ಟುವಂತೆ ಪ್ರೀತಿ ಸೆಲೆ

ಮನದ ಮಾಮರದಲ್ಲಿ
ಅಡಗಿರುವ ಕೋಗಿಲೆಯೇ..
ಮೌನವೇನಾ?ಮುರಿದು ಹಾಡು ಗಾನ




Monday, October 25, 2010

ಕಲ್ಪನೆಯ ಪ್ರೀತಿಪಾತ್ರಳಿಗೆ ಒಂದು ಪ್ರೀತಿ ಪತ್ರ



































ಹಾಯ್
ಗೆಳತಿ,

ಹೇಗಿದ್ದೀಯಾ? ಚೆನ್ನಾಗಿದ್ದೀಯ ನನಗೆ ಗೊತ್ತು ,ಜಸ್ಟ್ ನಿನಗೆ ಫೋನ್ ಮಾಡಿನೇ ನಾನು ಪತ್ರ ಬರೆಯಲು ಕೂತಿದ್ದು. ಇದೇನಿದು ಹತ್ತು ನಿಮಿಷಕ್ಕೊಂದು ಮೆಸ್ಸೇಜ್ ಗಂಟೆಗೊಂದು ಕಾಲ್ ಮಾಡುವವನು ಪತ್ರ ಬರೆಯುತ್ತಿದ್ದಾನ ಎಂದು ಆಶ್ಚರ್ಯ ಪಡಬೇಡ. ತುಂಡು ತುಂಡು
ಮೆಸ್ಸೇಜ್ ನಲ್ಲಿ ತುಂಡು ತುಂಡಾಗಿ ನನ್ನ ಮನಸಿನ ಭಾವನೆಗಳನ್ನು ಹೇಳಲಿಕ್ಕೆ ಸರಿ ಕಾಣಿಸಲಿಲ್ಲ.ಫೋನಿನಲ್ಲೂಹೇಳಲು ಇಸ್ಟವಾಗಲಿಲ್ಲ,ಫೋನ್ ಮಾಡಿದರೆ ನಿನ್ನ ಮಾತನ್ನು ಕೇಳುತ್ತಾ ಇರಬೇಕು ಅನ್ನಿಸುತ್ತೆ. ಇಂಪಾದ ದನಿ ಕೇಳಿದಸ್ಟೂಚಂದ. ಅದಕ್ಕೇ ಬೆರೇನನ್ನೂ ಹೇಳದೇ ಸುಮ್ಮನಿದ್ದುಬಿಡುವುದು.

ಹೇಯ್ ಪತ್ರ ಬರಿತಾ ಇರೋದು ಯಾಕೆ ಗೊತ್ತಾ? ನಾನು ಜಸ್ಟ್ ಜಡಿ ಮಳೆಯಲ್ಲಿ ತೋಯ್ದು ಬಂದು ಫ್ರೆಶ್ ಆದೆ.ನೀನದೆಸ್ಟುನೆನಪಾದೆ
ಗೊತ್ತಾ? ಜೊತೆಯಿರಬೇಕಿತ್ತು ಕಣೇ ! ಬೆಳ್ಳಗೆ ಹೊಳೆಯುತ್ತಿದ್ದ ಚಂದ್ರನನ್ನು ಕಾರ್ಮೋಡ ಕವಿದಾಗ ಧೋ ಎಂದು ಮಳೆ , ಚಂದ್ರನೇ ಅಳುತ್ತಿದ್ದಾನೋ ಎನ್ನುವಂತೆ.ನಿನ್ನನ್ನು ಮಿಸ್ ಮಾಡಿಕೊಂಡ ನನ್ನ ಕಣ್ಣಲ್ಲೂ ನೀರು, ನೀ ಜೊತೆಯಿಲ್ಲವಲ್ಲ ಎನ್ನುವದುಃಖಕ್ಕೆ ಇರಬೇಕು, ಕಾರಣ ನನಗೂ ಗೊತ್ತಾಗಲಿಲ್ಲ. ಕಣ್ಣೀರು ಬಂದಿದ್ದು ನನ್ನ ಮನಸ್ಸಿಗೆ ಗೊತ್ತಾಯಿತೇ ಹೊರತು ಜೋರು ಮಳೆಹನಿಯಲ್ಲಿ ಕೆನ್ನೆಗೆ ಅನುಭವವಾಗಲಿಲ್ಲ. ಆದರೆ ನಿನ್ನ ಬೆಟ್ಟದಸ್ಟು ಪ್ರೀತಿ ನೆನೆದಾಗ ತುಟಿಯಂಚಿನಲ್ಲಿ ಹೂ ನಗೆ ಬಂದಿದ್ದು ಮಾತ್ರಸುಳ್ಳಲ್ಲ. ಮಿಂಚು ಕೋರೈಸಿ ನಗುವಿನ ಹೊಳಪೇರಿಸಿತ್ತು.ಮೆಲ್ಲನೆ ಚಂದ್ರನೂ ಹೊರ ಬಂದು ನನಗೆ ಸಾಥ್ ನೀಡಿದ್ದ, ಜೊತೆನೇನೆಡೆದಿದ್ದ. ಮಳೆ ತುಂತುರಿಗೆ ಇಳಿದಿತ್ತು.

ರೂಮ್ ಸೇರುವ ಹೊತ್ತಿಗಾಗಲೇ ಮಳೆಯಿಂದ ಮೈ ಪೂರ್ತಿ ಒದ್ದೆ ..ಮನಸ್ಸೂ ಕೂಡ ನಿನ್ನ ನೆನಪಿನಿಂದ. ಜೊತೆ ಬರುತ್ತಿದ್ದ ಚಂದ್ರತುಂತುರು ಮಳೆ ಒಳಗೆ ಬರಲಿಲ್ಲ. ನೆನಪು ಮಾತ್ರ ಬಿರುಗಾಳಿಯಂತೆ ಮತ್ತೆ ನುಗ್ಗಿ ಬಂತು. ನೀನಿರಬೇಕಿತ್ತು ಕಣೆ.. ಗರಿ ಗರಿ ಟವೆಲ್ನಲ್ಲಿ ತಲೆ ಒರೆಸುತ್ತಾ ನೀನೂ ಮೈಯನ್ನು ಒದ್ದೆ ಮಾಡಿಕೊಂಡು .. ಪ್ರೀತಿ ಬೆರೆತ ಬಿಸಿ ಬಿಸಿ ಕಾಫಿಯನ್ನು ನೀನೊಂದು ಸಿಪ್ಪುನಾನೊಂದು ಸಿಪ್ಪು ಹೀರುತ್ತಾ... ಆಫೀಸಿನಲ್ಲಿ ನಡೆದುದ್ದೆಲ್ಲಾ ನಾ ನಿನಗೆ ಹೇಳುತ್ತಾ.. ಬೆಳಗ್ಗೆಯಿಂದ ಒಬ್ಬಳೇ ಬೇಸರವಾಗಿಫೋನಾಯಿಸಿದ ನಿನ್ನ ಗೆಳತಿಯರ ಸಂಸಾರದ ಬಗ್ಗೆ ಕೇಳುತ್ತಾ.. ಕೊನೆಗೆ ಹೇಳೋ,ನೀನಿಲ್ಲದೇ ಎಷ್ಟು ಕಷ್ಟ ಗೊತ್ತಾ ಕಳೆಯೋದುಎನ್ನುವ ಮಾತಿಗೆ ಕಾಯುತ್ತಾ.. ಎಸ್ಟೆಲ್ಲಾ ಆಸೆಯಾಯ್ತು ಗೊತ್ತಾ? ನೀನಿದ್ದಲ್ಲಿಗೆ ಓಡಿ ಬಂದು ಮತ್ತೊಂದು ಸಲ ಇಬ್ಬರೂ ಕೈ ಕೈಹಿಡಿದು ಮಳೆಯಲ್ಲಿ ನೆನೆಯಬೇಕೆನಿಸುವಸ್ಟು.ಕುಂತಲ್ಲೆ ಸಾವಿರ ಕನಸುಗಳು.

ಮುಂದಿನ ವರುಷ ಸಮಯಕ್ಕೆ ಕನಸುಗಳೆಲ್ಲಾ ನನಸಾಗಿರುತ್ತವೆ ತಾನೆ? ಇಬ್ಬರ ಮನೆಯಲ್ಲೂ ಒಪ್ಪಿರುವಾಗ , ಮನಸುಗಳೆರಡೂ ಕಲೆತಿರುವಾಗ.. ಒಂದು ವರ್ಷ ಕಸ್ಟವೇ.. ಆದರೂ ನಿನ್ನ ಓದು.. ನಿನ್ನ ಆಸೆ ನಾನು ಹೇಗೆ ಬೇಡ ಎನ್ನಲಿ . ನಿನ್ನಓದಿಗೆ ಶುಭ ಕೋರುತ್ತಾ .. ಮುಂದಿನ ವರ್ಷ ನನಸಾಗುವ ಕನಸಿನಲ್ಲಿ ಮುಳುಗುತ್ತಿದ್ದೇನೆ.. ಆಂ ಏನಂದೇ .. ಅದಕ್ಕೂ ಮುಂದಿನವರ್ಷ..? .. ಗೊತ್ತಾಯ್ತು ಬಿಡು.. ಛೀ ಕಳ್ಳಿ !!!!

ಕಷ್ಟ ಸುಖ ಫೋನಿನಲ್ಲಿ ಮಾತನಾಡೋಣ. ಮೆಸ್ಸೇಜ್ ನಲ್ಲಿ ಕಾಲೆಳೆಯುವುದಂತೂ ಇದ್ದೇ ಇದೆ.

internals ಆದ ಮೇಲೆ ನೀನು ಒಂದು ಪತ್ರ ಬರೆಯುತ್ತೀಯಲ್ಲಾ? ನಿನ್ನ ಮನದ ಭಾವನೆಯನ್ನು ಬಸಿದು..

ನಿನ್ನ ಪತ್ರಕ್ಕೆ ಕಾಯುತ್ತಿರುವ ನಿನ್ನ ಹೃದಯದ ಕಳ್ಳ

ಪ್ರವಿ

Friday, September 17, 2010

ಭವತಿ ಭಿಕ್ಷಾಂದೇಹಿ !!!




























ಹೆಸರು
ನೋಡಿದೊಡನೆ ನೆನಪಿಗೆ ಬರುವುದು ವಟುಗಳು ಭಿಕ್ಷಾಪಾತ್ರೆ ಹಿಡಿದಿರುವುದು.ಉಪನಯನದ ನಂತರ ಕೇವಲ ಬದುಕಿನಕಷ್ಟ ಗೊತ್ತಾಗಲಿ ಎಂದು ಕಳಿಸುವ ಒಂದು ಕ್ರಿಯೆ ಮಾತ್ರವಾಗಿತ್ತು .ಆದರೆ ನಾನು ಹೇಳ ಹೊರಟಿರುವುದು ಅವರ ಬಗ್ಗೆ ಅಲ್ಲ.ಪ್ರತೀ ಊರಿನಲ್ಲಿ, ಪ್ರತಿ ಪೇಟೆಯಲ್ಲಿ, ಕಂಡ ಕಂಡ ಸಿಗ್ನಲ್ ಗಳಲ್ಲಿ ಹಿಂಡು ಹಿಂಡಾಗಿ ಬರುವ ,ಭಿಕ್ಷಾಟನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರ ಬಗ್ಗೆ.ಕೆಲವೊಬ್ಬರು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕು ಭಿಕ್ಷುಕರಾಗಿರುತ್ತಾರೆ,ಹಲವಾರು ಜನ ಭಿಕ್ಷೆ ಬೇದುವುದಕ್ಕೇ ಪರಿಸ್ಥಿತಿ ಸೃಸ್ಠಿಸಿಕೊಳ್ಳುತ್ತಾರೆ.ದೇಹದಲ್ಲಿ ಶಕ್ತಿಯಿದ್ದೂ, ತೋಳಿನಲ್ಲಿ ಬಲವಿದ್ದರೂ ,ಕಷ್ಟಪಟ್ಟು ದುಡಿಯಲಾಗದ ಸೋಮಾರಿಗಳು ಹೊಟ್ಟೆಪಾಡಿಗೆ ಕಂಡು ಕೊಳ್ಳುವ ಮಾರ್ಗ ಭಿಕ್ಷಾಟನೆ.ಇವರಿಗೆ ದಿನಕ್ಕೊಂದು ಅಂಗವಿಕಲತೆ,ದಿನಕ್ಕೊಂದು ಸಿಗ್ನಲ್..ಬೇಡುವುದಕ್ಕೆ ಸಾವಿರ ಕಾರಣಗಳು.ಇಂತಹವರನ್ನು ಖಂಡಿತಾ ಹಣ ನೀಡಿ ಪ್ರೋತ್ಸಾಹಿಸಬಾರದು

ಪರಿಸ್ಥಿತಿ
ಒತ್ತಡಕ್ಕೆ ಸಿಲುಕಿ ಭಿಕ್ಷುಕರಾಗುವವರ ಕಥೆಯೇ ಬೇರೆ.ಜೀವನ ಪೂರ್ತಿ ಸಂಸಾರಕ್ಕಗಿ ದುಡಿದು, ಇನ್ನು ದೇಹದಲ್ಲಿ ತ್ರಾಣವಿಲ್ಲದಾಗ ಅದೇ ಸಂಸಾರ ಅವನ/ ಹೊರ ಹಾಕಿದಾಗ ಅನಿವಾರ್ಯವಾಗಿ ಭಿಕ್ಷಾಟನೆಗೆ ಇಳಿಯಬೇಕಾಗುತ್ತದೆ. ಯಾರು ವಾರಸುದಾರರಿಲ್ಲದಿದ್ದಾಗ ದುಡಿಯುವ ಅಂಗಗಳೂ ಊನವಾದಾಗ ಹೊಟ್ಟೆಪಾಡು,ಅಸಹಾಯಕತೆ.. ಬೇರೆಯವರ ಮುಂದೆ ಕೈಚಾಚುವಂತೆ ಮಾಡುತ್ತದೆ .ನನ್ನ ಪ್ರಕಾರ ಇವರಿಗೆ ಭಿಕ್ಷೆ ನೀಡುವುದರಲ್ಲಿ ಯಾವ ತಪ್ಪಿಲ್ಲ..

ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಭಿಕ್ಷಾಟನೆ ಧಂದೆಯಾಗಿ ಬೆಳೆದಿರುವುದು.ಶಾಲೆಗೆ ಹೋಗಬೇಕಾದ ಮಕ್ಕಳು,ಅನಾಥಮಕ್ಕಳನ್ನು ಹಿಡಿದು ತಂದು ಊರು ಕೇರಿ ಗೊತ್ತಿಲ್ಲದ ಜಾಗದಲ್ಲಿ ಭಿಕ್ಷಾಟನೆಗಿಳಿಸುತ್ತಾರೆ.ಬೇಡಲೇಬೇಕು ,ಇಲ್ಲದಿದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.ಒಂದೊಂದು ಮಕ್ಕಳಿಗೆ ಒಂದೊಂದು ಜಾಗಕ್ಕೆ , ವಯಸ್ಸಿಗೆ ತಕ್ಕಂತೆ ಟಾರ್ಗೆಟ್.ಅಸ್ಟು ಹಣ ಗಳಿಸಲೇ ಬೇಕು.ಇದರಲ್ಲಿ ಮಕ್ಕಳಿಗೆ ನಯಾಪೈಸೆಯೂ ದೊರೆಯುವುದಿಲ್ಲ ಎಲ್ಲಾ ಧಂದೆಗಿಳಿಸಿದವರಿಗೆ.ಇವರಿಗೆ ಹಿಡಿ ಕೂಳು ಸಿಕ್ಕರೆ ಹೆಚ್ಚು .ಭಿಕ್ಷೆ ಸರಿಯಾಗಿ ಸಿಗದಿದ್ದರೆ ಟಾರ್ಗೆಟ್ ರೀಚ್ ಆಗಲು ಪಿಕ್ ಪಾಕೆಟ್ ಮಾಡಲೂ ಹೆದರುವುದಿಲ್ಲ.ಹಾಗಾದರೆ ಇಂತವರಿಗೆ ಭಿಕ್ಷೆ ನೀಡಬೇಕೆ? ನನಗೂ ಗೊತ್ತಿಲ್ಲ..

ಎಲ್ಲ
ಯೋಚಿಸಿದಾಗ ಸಂಪೂರ್ಣ ಭಿಕ್ಷಾಟನೆ ನಿರ್ಮೂಲನೆ ಸಾಧ್ಯವೇ?ಎನ್ನುವ ಜಿಜ್ನಾಸೆ ಮೂಡುವುದು ಸಹಜ.ಸ್ವಲ್ಪ ಕಷ್ಟವಾದರೂ ಖಂಡಿತ ಸಾಧ್ಯ. ಎಲ್ಲರಲ್ಲಿ ಒಂದು ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕೆಂಬ ಕಳಕಳಿ ಬರಬೇಕು ಅಸ್ಟೇ .ದುಡಿದು ತಿನ್ನಲು ಸಾಧ್ಯವಿರುವವರಿಗೆ,ಸ್ವಾಭಿಮಾನ ಆತ್ಮವಿಶ್ವಾಸ ಹುಟ್ಟಿಸಿ ದುಡಿಯಲು ಅವಕಾಶ ನೀಡಬೇಕು.ಸ್ವಲ್ಪ ಅಂಗವಿಕಲತೆಯುಳ್ಳವರಿಗೆ, ಅವರಿಗೆ ಸಾಧ್ಯವಾಗುವಂತಹ ಕೆಲಸದಲ್ಲಿ ತರಬೇತಿ ಕೊಟ್ಟು ಬದುಕು ರೂಪಿಸಿಕೊಳ್ಳಲು ಸಹಾಯ ಮಾಡಬೇಕು.ಮಕ್ಕಳನ್ನು ದಂದಾಗಾರರ ಕಪಿಮುಷ್ಠಿಯಿಂದ ತಪ್ಪಿಸಿ,ತಿಳಿ ಹೇಳಿ ಓದಲು ನೆರವಾಗಬೇಕು. ಏನೂ ಮಾಡಲಾಗದ ಮುದುಕರು ಅಂಗವಿಕಲರಿಗೆ ಅವರಿಗೆಂದೇ ಇರುವ ಜಾಗಕ್ಕೆ ಸೇರಿಸಬೇಕು.ದಾನಿಗಳಿಂದ ಸಂಗ್ರಹಿಸಿ ಬದುಕಲು ನೆರವಾಗಬೇಕು.ಒಬ್ಬರಿಂದ ಇದು ಅಸಾಧ್ಯ, ಒಂದು ಸಂಸ್ಥೆಯಿಂದ , ಸರ್ಕಾರದಿಂದ ಮಾತ್ರ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯ.

ಭಿಕ್ಷುಕರ
ಉದ್ದಾರಕ್ಕೆಂದೇ ಇರುವ ಪುನರ್ವಸತಿ ಕೇಂದ್ರದ ಬಗ್ಗೆ ಎಲ್ಲರಿಗೂ ತಿಳಿದದ್ದೇ."ಭಿಕ್ಷೆ ಬೇಡಿದರೆ-ಒಂದು ದಿನ ಸಿಗದಿದ್ದರೂ-ಕೊನೇ ಪಕ್ಷ ಜೀವವಾದರೂ ಉಳಿಯುತ್ತದೆ ಇಲ್ಲಿದ್ದರೆ ಅದೂ ಇಲ್ಲ" ಎನ್ನೋ ಭಾವನೆ ಭಿಕ್ಷುಕರಲ್ಲಿಮೂಡುವಂತಾಗಿದೆ.ಸತ್ತ ಜೀವಕ್ಕೆ ಲೆಖ್ಖವೂ ಇಲ್ಲ ಬೆಲೆಯೂ ಇಲ್ಲ.ಹೇಳಿಕೇಳಿಕೊಳ್ಳುವವರೂ ಮೊದಲೇ ಇಲ್ಲ.ಬದುಕು ಕಟ್ಟಿಕೊಳ್ಳಲುಬಂದವರು ಜೀವ ಉಳಿಸಿಕೊಳ್ಳಲು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗುವ ಸಂದರ್ಭ ಬಂದಿದ್ದು ವಿಪರ್ಯಾಸ.ಬರೆದಸ್ಟೂ ಇದೆ ಬಿಡಿ ಅಲ್ಲಿನ ಅವ್ಯವಸ್ಥೆ....

ಅಸಹಾಯಕತೆ,ಅಂಗವಿಕಲತೆ , ಪರಿಸ್ಥಿತಿಯ ಒತ್ತಡದಿಂದ ಹೇಗೆ ಭಿಕ್ಷಾಟನೆಗಿಳಿಯುತ್ತರೆ , ಹೇಗೆ ಅನಿವಾರ್ಯವಾಗುತ್ತದೆಎನ್ನುವುದಕ್ಕೆ ಸಣ್ಣ ಕವನ.
ಹಾಗಂತ ನಾನು ಖಂಡಿತ ಭಿಕ್ಷಾಟನೆಯನ್ನು ಪ್ರೋತ್ಸಾಹಿಸುವುದಿಲ್ಲ.

ಅಮ್ಮ
..ಅಮ್ಮ ,ಅಣ್ಣ ಅಣ್ಣ..
ನೋಡಿ ನೋಡಿ ಬದಲಿಸಬೇಕು ಮಾತಿನ ಬಣ್ಣ
ಪೂರ್ವಕೃತ ? ಸ್ವಯಂಕೃತ ?
ಅಂತೂ ಪರಾಧೀನ..

ಛೀ,ತೂ ಮುಂದಕ್ಕೆ ಹೋಗು..
ದುಡಿದು ತಿನ್ನಲಿಕ್ಕೇನು ದಾಡಿ
ಅಂಗವಿಕಲತೆಯ ಸೋಗು
ನೋಡಲೂ ಇಲ್ಲ ನನ್ನ,ಎಲ್ಲರಲೂ ಒಂದೇ ನುಡಿ

ಅಂದು,ರಟ್ಟೆ ಮುರಿದು ಹೊಟ್ಟೆ ಕಟ್ಟಿಕೊಂಡೆ
ನನ್ನದೊಂದೇ ಅಲ್ಲ,ನನ್ನವರ ಹೊಣೆಯೂ ನಂದೇ..
ಏನೂ ಗಿಟ್ಟಿಸಲಾಗದೀಗ ನನ್ನಿಂದ..
ಸತ್ತಿರುವ ಮುದುಕ.
ಮೈ ನಡುಕ..
ಕಿವಿ ದೂರ..ಕಣ್ಣಲ್ಲಿ ಪೊರೆ
ನನ್ನ ದೇಹ ನನಗೇ ಹೊರೆ..
ನನ್ನವರಿಗೂ...
ಇಂದೋ ನಾಳೆನೋ
ಬದುಕಬೇಕಲ್ಲ ಅಲ್ಲಿವರೆಗೂ..
ಹೊಟ್ಟೆ ಪಾಡು,ಹೊರಡು ಮುಂದೆ
ಭವತಿ ಭಿಕ್ಷಾಂದೇಹಿ..
ಅಸಹಾಯಕ. ನಾನೊಬ್ಬ ಭಿಕ್ಷುಕ..

ಹೋಗಾಚೆ ದೂರ
ಶಾಲೆಗೆ ಹೋಗಬೇಕಾದ ಪೋರ..
ಆಗುವುದಿಲ್ಲವೇ ನಾಚಿಕೆ..
ಹೀಗೆ ಕೈ ಚಾಚುವುದಕೆ..

ಶಾಲೆ,ಹೆಸರು ಕೇಳಿದೊಡೆ
ಕಣ್ಣಲ್ಲಿ ನೂರು ಕನಸು
ಕನಸಷ್ಟೆ,ಸೇರಿಸುವರಾರು
ಆಗಲೇ ಕಳೆಯುತಿದೆ ವಯಸು
ಬೇಡಲೇಬೇಕು ಅನಿವಾರ್ಯ
ಅವರು?? ವಹಿಸಿದ್ದ ಕಾರ್ಯ..
ನಿನ್ನೆ ಕಣ್ಣೆರಡು ಕಾಣ..
ಇಂದು ಕಾಲೊಂದು ಊನ
ನಾಳೆ ಮತ್ತೊಂದು ..ಚಾಚಲೇಬೇಕು ಕೈನ
ಜಾಗ ಬದಲು..
ತಪ್ಪಿದರೆ ಚಾಟಿ.. ಬಾರುಕೋಲು
ತಪ್ಪದಿರೆ? ಬೇಡಿದ್ದು ಅವರಿಗೆ
ಹಿಡಿಕೂಳು ಹೊಟ್ಟೆಗೆ..ಹುಟ್ಟಿದ ತಪ್ಪಿಗೆ
ಹೊಟ್ಟೆಪಾಡು ಹೊರಡು ಮುಂದೆ
ಭವತಿ ಭಿಕ್ಷಾಂದೇಹಿ..
ಬಾಲಕ,ಅಮಾಯಕ..ನಾನೊಬ್ಬ ಭಿಕ್ಷುಕ


ಚಿಲ್ಲರೆ ಇಲ್ಲ ಛೀ,ತೂ ಅನ್ನುವ ಮುನ್ನ ಒಮ್ಮೆ ಯೋಚಿಸಿ.ಹಾಗೆ ಭಿಕ್ಷೆ ನೀಡುವ ಮುನ್ನ ಒಂದಲ್ಲ ಎರಡು ಸಲ ಯೋಚಿಸಿ ದುಡಿದುತಿನ್ನುವ ಸಮರ್ಥನಿರುವವನಿಗೆ ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ....

ಆತ್ಮವಿಶ್ವಾಸವಿದ್ದರೆ,ಸ್ವಲ್ಪ ಶಕ್ತಿಯಿದ್ದರೆ .. ಸಾಮಾನ್ಯ ಅಂಗವಿಕಲತೆ ಅಂಗವಿಕಲತೆಯಲ್ಲ ಸ್ವಾಭಿಮಾನಿಯಾಗಿಬದುಕಬಹುದೆನ್ನುವುದಕ್ಕೆ ಕೆಳಗಿನ ವೀಡಿಯೋ ನೋಡಿ

http://www.youtube.com/watch?v=8YF-ES8Q1zk

"IGNORANCE OF ABILITY BRINGS DISABILITY"

ಪ್ರೀತಿಯಿಂದ ಪ್ರವಿ